ಸೋಮವಾರ, ಜುಲೈ 6, 2009

ಇಸ್ಲಾಮೀ ವಿಶ್ವಾಸ ಕಾರ್ಯಗಳು ಕುರ್ಆನ್ ಸುನ್ನತ್ ನ ಬೆಳಕಿನಲ್ಲಿ

ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್‌ಉಸೈಮೀನ್


ಬುನಾದಿ


ಇಸ್ಲಾಮೀ ವಿಶ್ವಾಸದ ಬುನಾದಿಯ ಕುರಿತು ಹೇಳುವುದಾದರೆ ಅದು ಅಲ್ಲಾಹನಲ್ಲಿ, ಅವನ ಮಲಕ್(angel)ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅಂತ್ಯದಿನದಲ್ಲಿ ಮತ್ತು ದೈವಿಕ ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ- ವಿಶ್ವಾಸವಿಡುವುದಾಗಿದೆ. ಈ ಬುನಾದಿಗಿರುವ ಪುರಾವೆಗಳನ್ನು ಅಲ್ಲಾಹನ ಗ್ರಂಥವಾದ ಕುರ್‌ಆನ್‌ನಲ್ಲಿ ಮತ್ತು ಅವನ ಸಂದೇಶವಾಹಕರಾದ ಮುಹಮ್ಮದ್(ಸ)ರವರ ಚರ್ಯೆಯಾದ ಸುನ್ನತ್‌ನಲ್ಲಿ ವಿವರಿಸಲಾಗಿದೆ. ಅಲ್ಲಾಹನು ತನ್ನ ಗ್ರಂಥದಲ್ಲಿ ಹೇಳಿದ್ದಾನೆ:


"ನೀವು ನಿಮ್ಮ ಮುಖಗಳನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ತಿರುಗಿಸುವುದಲ್ಲ ಧರ್ಮ ಶೀಲತೆ. ಆದರೆ (ವಾಸ್ತವಿಕವಾಗಿ) ಯಾರು ಅಲ್ಲಾಹನಲ್ಲಿ, ಅಂತ್ಯದಿನದಲ್ಲಿ, ಮಲಕ್‌ಗಳಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಡುತ್ತಾನೋ ಅವನಾಗಿದ್ದಾನೆ ಧರ್ಮಶೀಲತೆಯಿರುವವನು." (ಕುರ್‌ಆನ್ 2:177)


ವಿಧಿವಿಶ್ವಾಸದ ಕುರಿತು ಅಲ್ಲಾಹನು ಹೇಳಿದ್ದಾನೆ:


"ಪೂರ್ವ ನಿರ್ಧರಿತ ವಿಧಿಯ ಪ್ರಕಾರ ನಾವು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿದೆವು. ಮತ್ತು ನಮ್ಮ ಆಜ್ಞೆಯು ಕಣ್ಣು ಮಿಟುಕಿಸಿದಂತೆ ಕೇವಲ ಒಂದು ಮಾತ್ರವೇ ಆಗಿದೆ." (54:49-50)


ಜಿಬ್ರೀಲ್ (Gabriel) ಎಂಬ ಮಲಕ್ ಪ್ರವಾದಿ(ಸ)ರವರೊಂದಿಗೆ ವಿಶ್ವಾಸದ ಕುರಿತು ಪ್ರಶ್ನಿಸಿದಾಗ ಪ್ರವಾದಿ(ಸ)ರವರು ಹೇಳಿದರು:
ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರಲ್ಲಿ, ಅಂತ್ಯದಿನದಲ್ಲಿ ವಿಶ್ವಾಸವಿಡುವುದಾಗಿದೆ. ಮತ್ತು ವಿಧಿಯಲ್ಲಿ -ಅದರ ಒಳಿತು ಮತ್ತು ಕೆಡುಕು ಗಳಲ್ಲಿ- ವಿಶ್ವಾಸವಿಡುವುದಾಗಿದೆ. (ಸಹೀಹ್ ಮುಸ್ಲಿಮ್ ಹದೀಸ್ ನಂ. 8)


ಅಲ್ಲಾಹನಲ್ಲಿ ವಿಶ್ವಾಸವಿಡುವುದು


ನಾವು ಅಲ್ಲಾಹನ ಪ್ರಭುತ್ವದಲ್ಲಿ (ರುಬೂಬಿಯ್ಯತ್) ವಿಶ್ವಾಸವಿಡಬೇಕು. ಅರ್ಥಾತ್ ನಮ್ಮ ಪ್ರಭು, ಸೃಷ್ಟಿಕರ್ತ, ಪರಮಾ ಧಿಕಾರವಿರುವ ಯಜಮಾನ ಮತ್ತು ನಿಯಂತ್ರಕ ಕೇವಲ ಅಲ್ಲಾಹನು ಮಾತ್ರವಾಗಿದ್ದಾನೆ ವಿಶ್ವಾಸವಿಡಬೇಕು.


ನಾವು ಅಲ್ಲಾಹನ ದೈವಿಕತೆ ಮತ್ತು ಆರಾಧನಾರ್ಹತೆಯಲ್ಲಿ (ಉಲೂಹಿಯ್ಯತ್) ವಿಶ್ವಾಸವಿಡಬೇಕು. ಅರ್ಥಾತ್ ನಮ್ಮೆಲ್ಲಾ ಆರಾಧನೆಗಳಿಗೆ ಅರ್ಹನಾಗಿರುವವನು ಕೇವಲ ಅಲ್ಲಾಹನು ಮಾತ್ರವೇ ಆಗಿದ್ದಾನೆ. ಅವನ ಹೊರತು ಆರಾಧಿಸಲ್ಪಡುವ ವ್ಯಕ್ತಿ ಶಕ್ತಿಗಳೆಲ್ಲವೂ ಬರೀ ಮಿಥ್ಯಗಳಾಗಿವೆ ಎಂದು ವಿಶ್ವಾಸವಿಡಬೇಕು.


ನಾವು ಅಲ್ಲಾಹನ ನಾಮ ಮತ್ತು ವಿಶೇಷಣಗಳಲ್ಲಿ (ಅಲ್‌ಅಸ್ಮಾಉ ವಸ್ಸಿಫಾತ್) ವಿಶ್ವಾಸವಿಡಬೇಕು. ಅರ್ಥಾತ್ ಸುಂದರವಾದ ಮತ್ತು ಅತ್ಯುನ್ನತವಾದ ನಾಮಗಳು ಮತ್ತು ಪರಿಪೂರ್ಣತೆಯನ್ನು ಹಾಗೂ ಸಮಗ್ರತೆಯನ್ನು ಬಿಂಬಿಸುವ ವಿಶೇಷಣಗಳು ಕೇವಲ ಅಲ್ಲಾಹನಿಗೆ ಮಾತ್ರವೇ ಸೇರಿದ್ದಾಗಿವೆಯೆಂದು ವಿಶ್ವಾಸವಿಡಬೇಕು.


ಈ ಮೇಲಿನ ಎಲ್ಲಾ ವಿಶ್ವಾಸಗಳಲ್ಲೂ ಅಲ್ಲಾಹನು ಏಕೈಕನಾಗಿದ್ದಾನೆಂದು (ವಹ್ದಾನಿಯ್ಯತ್) ವಿಶ್ವಾಸವಿಡಬೇಕು. ಅರ್ಥಾತ್ ಅವನಿಗೆ ತನ್ನ ಪ್ರಭುತ್ವದಲ್ಲಾಗಲಿ, ಆರಾಧನಾರ್ಹತೆಯಲ್ಲಾಗಲಿ ಅಥವಾ ನಾಮ ವಿಶೇಷಣಗಳಲ್ಲಾಗಲಿ ಯಾವನೇ ಅಥವಾ ಯಾವುದೇ ಸಹಭಾಗಿಗಳು ಅಥವಾ ಸರಿಸಮಾನರು ಇಲ್ಲವೆಂದು ವಿಶ್ವಾಸವಿಡಬೇಕು.


ಅಲ್ಲಾಹನು ಹೇಳಿದ್ದಾನೆ:


"ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆಯಿರುವ ಎಲ್ಲದರ ಪ್ರಭು. ಆದ್ದರಿಂದ ಅವನನ್ನು (ಮಾತ್ರ) ಆರಾಧಿಸು ಮತ್ತು ಅವನ ಆರಾಧನೆಯಲ್ಲಿ ಅಚಲವಾಗಿರು ಮತ್ತು ಸಹನೆಯಿಂದಿರು. ಅವನಿಗೆ ಸರಿಸಮಾನರಾಗಿರುವ ಯಾರನ್ನಾದರೂ ನೀನು ತಿಳಿದಿರುವೆಯಾ?" (19:65)


ಈ ಕೆಳಗಿನ ಕುರ್‌ಆನ್ ವಚನಗಳಲ್ಲಿ ಹೇಳಿದಂತೆ ನಾವು ಅಲ್ಲಾಹನ ಕುರಿತು ವಿಶ್ವಾಸವಿಡಬೇಕು.
"ಅಲ್ಲಾಹ್, ಅವನ ಹೊರತು ಆರಾಧನೆಗೆ ಅರ್ಹನಾಗಿರುವವನು ಯಾರೂ ಇಲ್ಲ. ಅವನು ಎಂದೆಂದಿಗೂ ಜೀವಿಸಿರುವವನೂ, ಸರ್ವ ಸೃಷ್ಟಿಗಳನ್ನೂ ಸದಾ ಪರಿಪಾಲಿಸುತ್ತಿರುವವನೂ ಆಗಿದ್ದಾನೆ. ತೂಕಡಿಕೆಯಾಗಲಿ, ನಿದ್ದೆಯಾಗಲಿ ಅವನನ್ನು ಬಾಧಿಸದು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದಾಗಿವೆ. ಅವನ ಅಪ್ಪಣೆಯ ಹೊರತು ಅವನ ಬಳಿ ಶಿಫಾರಸ್ಸು ಮಾಡಬಲ್ಲವನು ಯಾರಿದ್ದಾನೆ? ಅವರಿಗೆ (ತನ್ನ ಸೃಷ್ಟಿಗಳಿಗೆ) ಇಹಲೋಕದಲ್ಲಿ ಏನಾಗುವುದು ಮತ್ತು ಅವರಿಗೆ ಪರಲೋಕದಲ್ಲಿ ಏನಾಗಲಿದೆಯೆಂಬುದನ್ನು ಅವನು ಅರಿತಿದ್ದಾನೆ. ಅವನು ತಾನಿಚ್ಚಿಸಿದವುಗಳ ಹೊರತು ಅವನ ಜ್ಞಾನದಿಂದ ಏನನ್ನಾದರೂ ಆವರಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಾರದು. ಅವನ ಕುರ್ಸೀ (ಪಾದಪೀಠ) ಆಕಾಶಗಳ ಮತ್ತು ಭೂಮಿಯಷ್ಟು ವಿಶಾಲವಾಗಿದೆ. ಅವುಗಳ (ಆಕಾಶಗಳ ಮತ್ತು ಭೂಮಿಯ) ಸಂರಕ್ಷಣೆಯು ಅವನನ್ನು ದಣಿಸಲಾರವು. ಅವನು ಅತ್ಯುನ್ನತನೂ ಮಹೋನ್ನತನೂ ಆಗಿದ್ದಾನೆ." (2:255) ಎಂದು ನಾವು ವಿಶ್ವಾಸವಿಡಬೇಕು. ಅದೇ ರೀತಿ:


"ಅವನಾಗಿದ್ದಾನೆ ಅಲ್ಲಾಹನು. ಅವನ ಹೊರತು ಆರಾಧಿಸಲರ್ಹನಾದವನು ಯಾರೂ ಇಲ್ಲ. ಅಗೋಚರ ಮತ್ತು ಗೋಚರವಾಗಿರುವವು ಗಳನ್ನು ಅರಿತುಕೊಂಡಿರುವವನು. ಅವನು ಪರಮ ದಯಾಮಯನು ಮತ್ತು ಕರುಣಾಮಯಿ ಯಾಗಿದ್ದಾನೆ. ಅವನಾಗಿದ್ದಾನೆ ಅಲ್ಲಾಹನು. ಅವನ ಹೊರತು ಆರಾಧಿಸಲರ್ಹನಾದವನು ಯಾರೂ ಇಲ್ಲ. ಅವನು ಸಾಮ್ರಾಟನು, ಪವಿತ್ರನು, ಸರ್ವ ನ್ಯೂನತೆಗಳಿಂದಲೂ ಮುಕ್ತನಾದವನು, ನಿರ್ಭಯತೆಯನ್ನು ನೀಡುವವನು, ತನ್ನ ಸೃಷ್ಟಿಗಳ ಮೇಲ್ನೋಟವಹಿಸುವವನು, ಪ್ರತಾಪವಿರು ವವನು, ನಿರ್ಬಂಧಿಸುವವನು ಮತ್ತು ಪರಮಶ್ರೇಷ್ಠನು. ಅವರು ಸಹಭಾಗಿಗಳನ್ನು ಕಲ್ಪಿಸುವುದಕ್ಕಿಂತಲೂ ಅಲ್ಲಾಹನು ಅದೆಷ್ಟೋ ಪರಿಪಾವನನಾಗಿದ್ದಾನೆ. ಅವನಾಗಿದ್ದಾನೆ ಅಲ್ಲಾಹನು. ಅವನು ಸೃಷ್ಟಿಕರ್ತನು, ನಿರ್ಮಾತೃನು ಮತ್ತು ರೂಪವನ್ನು ನೀಡುವವನು. ಸುಂದರವಾದ ನಾಮಗಳು ಅವನಿಗೆ ಸೇರಿದ್ದಾಗಿವೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಪರಿಪಾವನತೆಯನ್ನು ಕೊಂಡಾಡುತ್ತಿವೆ. ಅವನು ಪ್ರತಾಪಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ." (59:22-24) ಎಂದು ಕೂಡ ನಾವು ವಿಶ್ವಾಸವಿಡಬೇಕು.


ಆಕಾಶಗಳ ಮತ್ತು ಭೂಮಿಯ ಪರಮಾಧಿಕಾರವು ಅಲ್ಲಾಹನಿಗೆ ಸೇರಿದ್ದಾಗಿದೆ ಯೆಂದು ನಾವು ವಿಶ್ವಾಸವಿಡಬೇಕು. ಅಲ್ಲಾಹನು ಹೇಳಿದ್ದಾನೆ:


"ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನಿಗೆ ಸೇರಿದ್ದಾಗಿದೆ. ತಾನು ಇಚ್ಚಿಸಿದ್ದನ್ನು ಅವನು ಸೃಷ್ಟಿಸುತ್ತಾನೆ. ತಾನಿಚ್ಚಿಸಿದವರಿಗೆ ಅವನು ಹೆಣ್ಣು ಸಂತತಿಯನ್ನು ನೀಡುತ್ತಾನೆ. ಮತ್ತು ತಾನಿಚ್ಚಿಸಿದವರಿಗೆ ಅವನು ಗಂಡು ಸಂತತಿಯನ್ನು ನೀಡುತ್ತಾನೆ. ಅಥವಾ (ತಾನಿಚ್ಚಿಸಿದವರಿಗೆ) ಅವನು ಗಂಡು ಮತ್ತು ಹೆಣ್ಣು ಸಂತತಿಗಳೆರಡನ್ನೂ ನೀಡುತ್ತಾನೆ. ಮತ್ತು ತಾನಿಚ್ಚಿಸಿದವರನ್ನು ಅವನು ಬಂಜೆಯನ್ನಾಗಿ ಮಾಡುತ್ತಾನೆ. ಅವನು ಎಲ್ಲವನ್ನು ಅರಿಯು ವವನೂ ಎಲ್ಲದಕ್ಕೂ ಸಾಮರ್ಥ್ಯವಿರುವವನಾಗಿದ್ದಾನೆ." (42:49,50)


ಅದೇ ರೀತಿ:
"ಅವನಿಗೆ ಸಾದೃಶ್ಯವಾಗಿ ಏನೊಂದೂ ಇಲ್ಲ. ಅವನು ಎಲ್ಲವನ್ನೂ ಆಲಿಸುವವನೂ ಕಾಣುವವನೂ ಆಗಿದ್ದಾನೆ. ಆಕಾಶಗಳ ಮತ್ತು ಭೂಮಿಯ ಕೀಲಿಕೈಗಳು ಅವನಿಗೆ ಸೇರಿದ್ದಾಗಿವೆ. ತಾನಿಚ್ಚಿಸಿದವರಿಗೆ ಅವನು ಅನ್ನಾಧಾರಗಳನ್ನು ವಿಶಾಲಗೊಳಿಸುತ್ತಾನೆ ಮತ್ತು (ತಾನಿಚ್ಚಿಸಿದವರಿಗೆ ಅದನ್ನು) ಇಕ್ಕಟ್ಟುಗೊಳಿಸುತ್ತಾನೆ. ಅವನು ಪ್ರತಿಯೊಂದು ವಸ್ತುವಿನ ಕುರಿತೂ ಅರಿವುಳ್ಳವನಾಗಿದ್ದಾನೆ." (42:11,12) ಎಂದು ನಾವು ವಿಶ್ವಾಸವಿಡಬೇಕು.

1 ಕಾಮೆಂಟ್‌:

  1. ನೇರದಾರಿಯಲ್ಲಿ ನೀವು ಬರೆದ ಕತೆಯ ಬಗೆಗೆ:
    ಬೋಳುವಾರ ಮೊಹಮ್ಮದ ಕುಂಯಿ, ಮೊಹಮ್ಮದ ಕಟ್ಪಾಡಿ ಹಾಗೂ
    ಸಾರಾ ಅಬೂ ಬಕ್ಕರ ಇವರು ಮುಸ್ಲಿಮ್ ಸಮುದಾಯದ ಜೀವನದ ಬಗೆಗೆ ಕನ್ನಡದಲ್ಲಿ ಒಳ್ಳೆಯ ಸಾಹಿತ್ಯ ನೀಡಿದ್ದಾರೆ. ನೀವೂ ಈ ಸಾಲಿನಲ್ಲಿ ಸೇರಬಹುದು ಎಂದು ಅನಿಸುತ್ತದೆ.
    ನೇರದಾರಿಯಲ್ಲಿ comment post ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಇಲ್ಲಿ ಮಾಡಿದ್ದೇನೆ.

    ಪ್ರತ್ಯುತ್ತರಅಳಿಸಿ