ಸೋಮವಾರ, ಜುಲೈ 6, 2009

ಸೃಷ್ಟಿಯ ಅಧ್ಯಯನದ ಮೂಲಕ ಸೃಷ್ಟಿ ಕರ್ತನೆಡೆಗೆ....

ವಿ ಕೆ ಹಿದಾಯತುಲ್ಲಾಹ್ ವೀರಕಂಭ

ಮನುಷ್ಯನು ಜನ್ಮತಃ ಜಿಜ್ಞಾಸಿಯಾಗಿರುವನು. ತನ್ನ ಹಾಗೂ ತನ್ನ ಸುತ್ತಮುತ್ತಲಿನ ಮಾತ್ರವಲ್ಲ, ಪ್ರಪಂಚದ ಕುರಿತಾದ ಸಂಶೋಧನಾತ್ಮಕ ಅಧ್ಯಯನವನ್ನು ಅವನು ತನ್ನ ಶೈಶವಾವಸ್ಥೆಯಲ್ಲೇ ಪ್ರಾರಂಭಿಸುತ್ತಾನೆ. ತನಗೆ ನೀಡಲಾದ ಆಟಿಕೆಯನ್ನು ಒಡೆದು ಕುತೂಹಲದಿಂದ ಅದರೊಳಗೇನಿದೆ ಎಂಬುದನ್ನರಿಯಲು ಮಕ್ಕಳು ಪಡುವ ಪರಿಶ್ರಮವು ಪ್ರಪಂಚದ ವಾಸ್ತವಿಕತೆಯ ಕುರಿತು ತಿಳಿಯುವ ಮಾನವ ಮನಸ್ಸಿನ ಸಂಶೋಧನಾತ್ಮಕ ಅನ್ವೇಷಣೆಗೊಂದು ಜ್ವಲಂತ ನಿದರ್ಶನವಾಗಿದೆ.

ಆಕಾಶದ ಅನಂತತೆಯ ಕುರಿತು ಮತ್ತು ಸಮುದ್ರದ ಆಳ ಮತ್ತು ಸಂಕೀರ್ಣತೆಗಳ ಕುರಿತು ಅತೀವ ಆಸಕ್ತಿಯಿಂದ ಸಂಶೋಧಿಸುತ್ತಿರುವ ವಿಜ್ಞಾನಿಗಳೂ ಕೂಡ ಈ ಪ್ರಪಂಚದ ವಾಸ್ತವಿಕತೆಯನ್ನು ಅರಿಯುವ ಮಾನವ ಮನಸ್ಸಿನ ಅನ್ವೇಷಣಾ ತ್ವರೆಯ ಕುರಿತು ಒಂದು ಉದಾಹರಣೆ ಮಾತ್ರ.

ಒಂದು ತೆರೆದಿಡಲ್ಪಟ್ಟ ಗ್ರಂಥದಂತಿರುವ ಈ ಮಹಾ ಪ್ರಪಂಚದ ಯಾವುದೇ ಕಡೆಯಲ್ಲಿಯೂ ಪ್ರಪಂಚ ನಿರ್ಮಾತೃನ ಹೆಸರನ್ನು ಬರೆಯಲ್ಪಟ್ಟಿಲ್ಲ. ಆದರೆ ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಯೂ, ಪ್ರತಿಯೊಂದು ವಸ್ತುವೂ ಇದಕ್ಕೆಲ್ಲಾ ಓರ್ವ ನಿರ್ಮಾಪಕನಿರಲೇಬೇಕು ಎಂಬ ಸತ್ಯವನ್ನು ಪ್ರಕಟಿಸುತ್ತದೆ.

ಮಾನವನು ಭೂಮುಖದ ಮೇಲೆ ಜೀವಿಸುತ್ತಿರುವ ಜೀವಿಗಳಲ್ಲಿ ಅತಿಬುದ್ಧಿಶಾಲಿಯಾಗಿರುವನು. ಈ ಬೃಹತ್ ಪ್ರಪಂಚದ ಕುರಿತಾಗಿ ಮಾನವ ಮನಸ್ಸಿನಲ್ಲಿ ಉದ್ಭವಿಸುವ ಹಲವಾರು ಸಹಜ ಪ್ರಶ್ನೆಗಳಿವೆ. ನಿರಕ್ಷರಿ ವ್ಯಕ್ತಿಯಿಂದ ಪ್ರಾರಂಭಗೊಂಡು ಮಹಾನ್ ವಿಜ್ಞಾನಿಯ ತನಕ ಪ್ರತಿಯೊಬ್ಬನ ಮನಸ್ಸಲ್ಲೂ ಈ ಪ್ರಶ್ನೆಗಳು ಮೂಡುತ್ತವೆ. ಮನುಷ್ಯನ ಬುದ್ಧಿಶಕ್ತಿ ಹಾಗೂ ಚಿಂತನಾಶಕ್ತಿಯು ಅವನಲ್ಲಿ ಈ ಪ್ರಶ್ನೆಗಳನ್ನು ಮೂಡಿಸುತ್ತವೆ. ಪ್ರಪಂಚದಲ್ಲಿ ಈ ಹಿಂದೆ ಗತಿಸಿ ಹೋದ ಯಾವುದೇ ನಾಗರಿಕತೆಗಳ ಕುರಿತು ಅನ್ವೇಷಿಸಿದರೂ ಈ ಕಾರ್ಯವು ನಮಗೆ ಸ್ಪಷ್ಟವಾಗುತ್ತದೆ.

ಈ ಬೃಹತ್ ಪ್ರಪಂಚವನ್ನು ಸೃಷ್ಟಿಸಿ, ಸಂವಿಧಾನಿಸಿ, ಇದನ್ನು ಮುನ್ನಡೆಸುತ್ತಿರುವವನಾರು ಎಂಬುದು ಮಾನವ ಮನಸ್ಸಿನಲ್ಲಿ ಮೂಡಿಬರುವ ಪ್ರಥಮ ಹಾಗೂ ಪ್ರಮುಖ ಪ್ರಶ್ನೆಯೇ ಆಗಿದೆ. ಆದರೆ ಪರ್ವತಗಳ ಅಸ್ತಿತ್ವ, ಭೂಮ್ಯಾಕಾಶಗಳ ಸೃಷ್ಟಿ, ಅವುಗಳ ಕುರಿತಾದ ಅಧ್ಯಯನವು ಈ ಪ್ರಪಂಚಕ್ಕೆ ಓರ್ವ ಸೃಷ್ಟಿಕರ್ತನಿದ್ದಾನೆ ಎಂಬುದನ್ನು ಸಂಶಯಕ್ಕೆಡೆಯಿಲ್ಲದ ರೀತಿಯಲ್ಲಿ ಸಾಬೀತುಪಡಿಸುತ್ತದೆ.

ನಾವು ನಮ್ಮ ಕುರಿತೇ ಚಿಂತಿಸೋಣ.

ತಂದೆಯು ಸೃವಿಸುವ ಕೋಟ್ಯಾನುಕೋಟಿ ವೀರ್ಯಾಣುಗಳಲ್ಲಿ ಒಂದು ವೀರ್ಯಾಣು ಮಾತ್ರ ತಾಯಿಯ ಗರ್ಭಾಶಯದಲ್ಲಿ ಅಂಡಾಣುವಿನೊಂದಿಗೆ ಸಂಯೋಜನೆ ಗೊಳ್ಳುತದೆ. ತನ್ಮೂಲಕ ಮಾನವ ಸೃಷ್ಟಿಕ್ರಿಯೆ ಆರಂಭಗೊಳ್ಳುತ್ತದೆ. ಚಿಂತನಾಶೀಲನಾಗಿರುವ, ಬುದ್ಧಿಶಕ್ತಿಯಿರುವ ಯಾವನೇ ಓರ್ವ ವ್ಯಕ್ತಿಗೆ ಈ ವೀರ್ಯಾಣು ಅಂಡಾಣುಗಳೆಲ್ಲವೂ ತನ್ನಿಂತಾನೇ ಸ್ವಯಂ ಉಂಟಾಯಿತೆಂದು ಹೇಳಲು ಸಾಧ್ಯವಾದೀತೇ? ಅಥವಾ ಇವೆಲ್ಲವನ್ನೂ ಸೃಷ್ಟಿಸಿದವನು ನಾನೇ ಎಂದು ಘೋಷಿಸಿಕೊಳ್ಳಲು ಯಾವನೇ ವ್ಯಕ್ತಿಗಾದರೂ ಸಾಧ್ಯವಿದೆಯೇ?

ಅಲ್ಲಾಹನು ಮಾನವನ ಬುದ್ಧಿಯೊಂದಿಗೆ ಪ್ರಶ್ನಿಸುತ್ತಾನೆ:

“ನೀವು ಸೃವಿಸುತ್ತಿರುವುದನ್ನು (ವೀರ್ಯವನ್ನು) ನೀವು ನೋಡುವುದಿಲ್ಲವೇ? ನೀವಾಗಿರುವಿರೋ ಅದನ್ನು ಸೃಷ್ಟಿಸುತ್ತಿರುವವರು ಅಥವಾ ನಾವಾಗಿರುವೆವೋ (ಅದರ) ಸೃಷ್ಟಿಕರ್ತರು?” (ಆದರಣೀಯ ಕುರ್‌ಆನ್ ೫೬:೫೮,೫೯)

“ಖಂಡಿತಾಗಿಯೂ ನಾವು ಮಾನವನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು. ನಂತರ ನಾವು ಅವನನ್ನು ‘ನುತ್ಫ’ (ಸ್ತ್ರೀಪುರುಷರ ಮಿಶ್ರಿತ ವೀರ್ಯ)ವನ್ನಾಗಿ ಮಾಡಿ ಒಂದು ಸುರಕ್ಷಿತವಾದ ಸ್ಥಳದಲ್ಲಿ (ಗರ್ಭಾಶಯದಲ್ಲಿ) ನೆಲೆಗೊಳಿಸಿದೆವು. ಬಳಿಕ ನಾವು ‘ನುತ್ಫ’ವನ್ನು ಹೆಪ್ಪುಗಟ್ಟಿದ ರಕ್ತಪಿಂಡವನ್ನಾಗಿ ಮಾಡಿದೆವು. ತದನಂತರ ಆ ಹೆಪ್ಪುಗಟ್ಟಿದ ರಕ್ತಪಿಂಡವನ್ನು ಮಾಂಸಖಂಡವನ್ನಾಗಿ ಮಾಡಿದೆವು. ಆಮೇಲೆ ಮಾಂಸಖಂಡವನ್ನು ಮೂಳೆಗಳನ್ನಾಗಿ ಮಾಡಿದೆವು. ತದನಂತರ ಮೂಳೆಗಳನ್ನು ಮಾಂಸಗಳಿಂದ ಹೊದಿಸಿದೆವು. ಆ ಬಳಿಕ ನಾವು ಅದನ್ನು ಬೇರೆಯೇ ಸೃಷ್ಟಿಯನ್ನಾಗಿ ಹೊರತಂದೆವು. ಆದ್ದರಿಂದ ಸೃಷ್ಟಿಸುವವರಲ್ಲಿ ಅತ್ಯುತ್ತಮನಾದ ಅಲ್ಲಾಹನು ಅನುಗ್ರಹೀತನಾಗಿದ್ದಾನೆ.” (ಆದರಣೀಯ ಕುರ್‌ಆನ್ ೨೩:೧೨-೧೪)

ಕುರ್‌ಆನ್ ಅದೆಷ್ಟು ಸರಳ ಹಾಗೂ ವೈಜ್ಞಾನಿಕವಾಗಿ ಮನುಷ್ಯ ಸೃಷ್ಟಿಯ ಕುರಿತು ವಿವರಿಸುತ್ತದೆ! ಅಧ್ಯಯನಾಶೀಲನಾದ ಮನುಷ್ಯನ ಚಿಂತನಾಶಕ್ತಿಯನ್ನು ಬಡಿದೆಬ್ಬಿಸುವ ರೀತಿಯಲ್ಲಿ ಕುರ್‌ಆನ್ ಅವನ ಸೃಷ್ಟಿಕ್ರಿಯೆಯ ಕುರಿತು ವಿವರಿಸಿಕೊಡುತ್ತದೆ. ಮಾನವನಿಗೆ ಓರ್ವ ಸೃಷ್ಟಿಕರ್ತನಿರುವನೆಂದು ಮಾತ್ರವಲ್ಲ ಅವನು ಯಾರೆಂದು ಕೂಡ ಕುರ್‌ಆನ್ ಅತ್ಯಂತ ಸಮರ್ಪಕವಾಗಿ ಮನುಷ್ಯನ ಮುಂದೆ ತೆರೆದಿಡುತ್ತದೆ!

ಇನ್ನು ನಮ್ಮ ಪರಿಸರದೆಡೆಗೆ ಒಮ್ಮೆ ಕಣ್ಣೋಡಿಸೋಣ!

ವ್ಯತ್ಯಸ್ತ ಬಣ್ಣ ಮತ್ತು ರುಚಿಗಳುಳ್ಳ ಫಲಗಳನ್ನು ನೀಡುವ ಸಸ್ಯವೃಕ್ಷಲತಾದಿಗಳೆಡೆಗೆ ಒಮ್ಮೆ ನೋಡಿರಿ. ಅವುಗಳ ಕುರಿತೊಮ್ಮೆ ಚಿಂತಿಸಿರಿ. ಅವುಗಳಿಲ್ಲದಿರುತ್ತಿದ್ದರೆ ಮನುಷ್ಯನ ಬದುಕು ಅದೆಷ್ಟು ದುಸ್ತರವಾಗುತ್ತಿತ್ತು ಎಂಬುದನ್ನು ಆಲೋಚಿಸಿರಿ! ಇವುಗಳನ್ನೆಲ್ಲಾ ಸೃಷ್ಟಿಸಿದವನಾರು? ಯಾವನೇ ವ್ಯಕ್ತಿಗೂ ನಾನೆಂದು ಘೋಷಿಸಿಕೊಳ್ಳುವ ಧೈರ್ಯವಿದೆಯೇ?

“ಆಕಾಶದಿಂದ ಮಳೆನೀರನ್ನು ಸುರಿಸಿದವನು ಅವನಾಗಿದ್ದಾನೆ. ಅದರಿಂದ ನೀವು ಕುಡಿಯುತ್ತೀರಿ ಮತ್ತು ಅದರಿಂದ ಉಂಟಾದ ಹುಲ್ಲನ್ನು ನಿಮ್ಮ ಜಾನುವಾರುಗಳಿಗೆ ಮೇಯಿಸುತ್ತೀರಿ. ಅದರ (ನೀರಿನ) ಮೂಲಕ ಅವನು ನಿಮಗೆ ಬೆಳೆಗಳನ್ನು, ಇಪ್ಪೆ, ಖರ್ಜೂರ, ದ್ರಾಕ್ಷೆ ಮತ್ತು ನಾನಾ ತರದ ಫಲಗಳನ್ನು ಉತ್ಪಾದಿಸಿ ಕೊಡುತ್ತಾನೆ. ಖಂಡಿತವಾಗಿಯೂ ಚಿಂತಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.” (ಆದರಣೀಯ ಕುರ್‌ಆನ್ ೧೬:೧೦, ೧೧)

ಇನ್ನು ಸಮುದ್ರದೆಡೆಗೆ ನೋಡಿರಿ. ಸಮುದ್ರದಲ್ಲಿ ಜೀವಿಸುವ ಜಲಚರಗಳು, ಆಕಾಶದಲ್ಲಿ ಹಾರಾಡುವ ಹಕ್ಕಿಗಳು, ಕಾಡುಮೃಗಗಳು, ಸಾಕುಪ್ರಾಣಿಗಳು, ಅವುಗಳಿಗೆ ನೀಡಲ್ಪಟ್ಟ ವ್ಯತ್ಯಸ್ತ ಶಕ್ತಿಗಳು, ಅವುಗಳನ್ನು ಸಂವಿಧಾನಿಸಲ್ಪಟ್ಟ ವಿಭಿನ್ನ ರೀತಿಗಳು ಎಲ್ಲವೂ ಅತ್ಯದ್ಭುತಗಳಲ್ಲವೇ?

ಪಕ್ಷಿಗಳ ಹಾರಾಟದ ಬಗ್ಗೆ ಕುರ್‌ಆನ್ ಹೇಳುತ್ತದೆ:

“ಆಕಾಶದ ಮಧ್ಯದಲ್ಲಿ ನಿಯಂತ್ರಿತವಾಗಿ (ಹಾರಾಡುವ) ಪಕ್ಷಿಗಳನ್ನು ಅವರು ನೋಡುವುದಿಲ್ಲವೇ? ಅಲ್ಲಾಹನ ಹೊರತು ಅವುಗಳನ್ನು ಏನೊಂದೂ ಹಿಡಿದುಕೊಳ್ಳುತ್ತಿಲ್ಲ. ನಿಶ್ಚಯವಾಗಿಯೂ ವಿಶ್ವಾಸಿವಿಡುವ ಜನರಿಗೆ ಅದರಲ್ಲಿ ನಿದರ್ಶನಗಳಿವೆ.” (ಆದರಣೀಯ ಕುರ್‌ಆನ್ ೧೬/೭೯)

“ತಮ್ಮ ಮೇಲ್ಭಾಗದಲ್ಲಿ ರೆಕ್ಕೆಗಳನ್ನು ಬಿಚ್ಚಿಕೊಳ್ಳುತ್ತಾ ಮತ್ತು ಮಡಚಿಕೊಳ್ಳುತ್ತಾ (ಹಾರಾಡುತ್ತಿರುವ) ಹಕ್ಕಿಗಳನ್ನು ಅವರು ನೋಡುವುದಿಲ್ಲವೇ? ಪರಮ ದಯಾಮಯನ (ಅಲ್ಲಾಹನ) ಹೊರತು ಅವುಗಳನ್ನು ಏನೊಂದೂ ಹಿಡಿದುಕೊಳ್ಳುತ್ತಿಲ್ಲ. ಖಂಡಿತವಾಗಿಯೂ ಅವನು ಪ್ರತಿಯೊಂದು ವಸ್ತುವನ್ನೂ ಸೂಕ್ಷ್ಮವಾಗಿ ವೀಕ್ಷಿಸುವವನಾಗಿದ್ದಾನೆ.” (ಆದರಣೀಯ ಕುರ್‌ಆನ್ ೬೭/೧೯)

ಭೂಮ್ಯಾಕಾಶ, ಸೂರ್ಯ, ಚಂದ್ರ, ನಕ್ಷತ್ರಾದಿಗಳ ಕುರಿತು, ಹಗಲು ರಾತ್ರಿಗಳ ಕುರಿತು ಮಾತ್ರವಲ್ಲ, ತನ್ನ ಶರೀರದ ಕುರಿತು ಚಿಂತಿಸಿ ಈ ಪ್ರಪಂಚದ ಸೃಷ್ಟಿಕರ್ತನನ್ನು ಅರಿಯಲು ಕುರ್‌ಆನ್ ಕರೆ ನೀಡುತ್ತದೆ. ಮನುಷ್ಯ ಚಿತ್ತಕ್ಕೆ ಸವಾಲೆಸೆದು ಅವನ ಚಿಂತನಾಶಕ್ತಿಯನ್ನು ಬಡಿದೆಬ್ಬಿಸಿ ಸೃಷ್ಟಿಕರ್ತನ ಬಗ್ಗೆ ತಿಳಿಯಲು ಕುರ್‌ಆನ್ ಪದೇ ಪದೇ ಸಾರುತ್ತದೆ.

ಕುರ್‌ಆನ್ ಹೇಳುವುದನ್ನು ನೋಡಿರಿ:

“ಅವರು ಒಂಟೆಯ ಕಡೆಗೆ ನೋಡುವುದಿಲ್ಲವೇ, ಅದು ಹೇಗೆ ಸೃಷ್ಟಿಸಲ್ಪಟ್ಟಿದೆಯೆಂದು? ಆಕಾಶದೆಡೆಗೆ, ಅದು ಹೇಗೆ ಎತ್ತರಿಸಲ್ಪಟ್ಟಿದೆಯೆಂದು? ಪರ್ವತದೆಡೆಗೆ, ಅದು ಹೇಗೆ (ಭದ್ರವಾಗಿ) ನಾಟಿನಿಲ್ಲಿಸಲಾಗಿದೆಯೆಂದು? ಮತ್ತು ಭೂಮಿಯೆಡೆಗೆ, ಅದು ಹೇಗೆ ಹರಡಿಸಲಾಗಿದೆಯೆಂದು?” (ಆದರಣೀಯ ಕುರ್‌ಆನ್ ೮೮/೧೭-೨೦)

“ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿಯಲ್ಲಿ, ರಾತ್ರಿ ಮತ್ತು ಹಗಲು ಅನುಕ್ರಮವಾಗಿ ಬದಲಾಗುವುದರಲ್ಲಿ ಬುದ್ಧಿವಂತರಿಗೆ ದೃಷ್ಟಾಂತಗಳಿವೆ.” (ಆದರಣೀಯ ಕುರ್‌ಆನ್ ೩/೧೯೦)

“ಅವನೇ ಆಗಿರುವನು ರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರರನ್ನು ಸೃಷ್ಟಿಸಿದವನು. ಪ್ರತಿಯೊಂದೂ (ಅದಕ್ಕೆ ನಿಶ್ಚಯಿಸಲಾದ) ಪಥಗಳಲ್ಲಿ ಚಲಿಸುತ್ತಿವೆ.” (ಆದರಣೀಯ ಕುರ್‌ಆನ್ ೨೧/೩೩)

ಸರ್ವ ರೀತಿಯ ಅಧ್ಯಯನ ಮತ್ತು ಚಿಂತನೆಗಳ ಮೂಲಕ ಸೃಷ್ಟಿಕರ್ತನ ಕುರಿತು ಅರಿತುಕೊಳ್ಳಲು ಕರೆ ನೀಡುವ ಕುರ್‌ಆನ್ ಅವನನ್ನು ಮಾತ್ರವೇ ಆರಾಧಿಸಬೇಕೆಂದು ಕರೆ ನೀಡುತ್ತದೆ.

“ಓ ಜನರೇ, ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನೇ ನೀವು ಆರಾಧಿಸಿರಿ. ನೀವು ಭಯಭಕ್ತಿಯುಳ್ಳವರಾಗಲೂ ಬಹುದು. ಅವನು ಭೂಮಿಯನ್ನು ನಿಮಗೊಂದು ಹಾಸನ್ನಾಗಿಯೂ, ಮುಗಿಲನ್ನು ಮೇಲ್ಛಾವಣಿಯನ್ನಾಗಿಯೂ ಮಾಡಿ, ಆಕಾಶ ದಿಂದ ನಿಮಗೋಸ್ಕರ ಮಳೆನೀರನ್ನು ಸುರಿಸಿ, ತನ್ಮೂಲಕ ವಿವಿಧ ರೀತಿಯ ಫಲಗಳನ್ನು ನಿಮಗೋಸ್ಕರ ಹೊರತಂದವನಾಗಿರುವನು. ಆದ್ದರಿಂದ ಇವೆಲ್ಲವನ್ನೂ ತಿಳಿದವರಾಗಿದ್ದೂ ಕೂಡ ನೀವು ಅಲ್ಲಾಹನೊಂದಿಗೆ ಇತರರನ್ನು ಸರಿಸಮಾನರನ್ನಾಗಿ ಮಾಡಬೇಡಿ.” (ಆದರಣೀಯ ಕುರ್‌ಆನ್ ೨/೨೧,೨೨)

ನಮಗೆ ಸಾಧ್ಯವಿರುವ ಎಲ್ಲಾ ಮಾಧ್ಯಮಗಳ ಮೂಲಕ ಅಧ್ಯಯನ ನಡೆಸೋಣ. ನಮ್ಮ ಚಿಂತನಾಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳೋಣ. ನಮ್ಮ ಬುದ್ಧಿಯನ್ನು ಪೂರ್ವಿಕರ ಅಂಧಾನುಕರಣೆಗೆ ಬಲಿ ನೀಡದೆ, ಯಾವುದೇ ವ್ಯಕ್ತಿ, ಶಕ್ತಿಗಳ ಮುಂದೆ ಒತ್ತೆಯಿಡದೆ ನಿಷ್ಪಕ್ಷಪಾತವಾಗಿ ಚಿಂತಿಸೋಣ. ಅವನನ್ನು ಮಾತ್ರ ಆರಾಧಿಸುವುದರ ಮೂಲಕ ಭಯಭಕ್ತಿಯುಳ್ಳವರಾಗಿ ಅವನೆಡೆಗೆ ಮರಳೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ